ಬರೆಯುವ ತಲ್ಲಣ
ಬರೆಯುವ ತಲ್ಲಣ
ಇಂದು,ನೆನ್ನೆಯದೇನಲ್ಲ.
ಕಂಡದ್ದು,ಕಾಣದ್ದು
ಅರಿತೂ ಅರಿಯದ್ದು
ಪದಗಳಾಗದೇ ಅವಿತಿದ್ದು.
ಭಾವವೊಂದು ಬೆಳೆವುದು,
ನನ್ನೆದೆಯ ಬಗೆದು
ಕವನವಾಗೆ ನಲಿವುದು
ಕನವರಿಸಿದ ಕ್ಷಣಗಳೋ..?
ನೂರು ಹೇಳ ಹೊರಟರೂ
ನುಡಿದದ್ದೊಂದೆ.
ಅದೇ ತುಮುಲದ
ಮತ್ತೊಂದು ಮಗ್ಗಲು !
ಬರೆಯುವ ತಲ್ಲಣ
ಇಂದು,ನೆನ್ನೆಯದೇನಲ್ಲ.
ಕಂಡದ್ದು,ಕಾಣದ್ದು
ಅರಿತೂ ಅರಿಯದ್ದು
ಪದಗಳಾಗದೇ ಅವಿತಿದ್ದು.
ಭಾವವೊಂದು ಬೆಳೆವುದು,
ನನ್ನೆದೆಯ ಬಗೆದು
ಕವನವಾಗೆ ನಲಿವುದು
ಕನವರಿಸಿದ ಕ್ಷಣಗಳೋ..?
ನೂರು ಹೇಳ ಹೊರಟರೂ
ನುಡಿದದ್ದೊಂದೆ.
ಅದೇ ತುಮುಲದ
ಮತ್ತೊಂದು ಮಗ್ಗಲು !
Posted by
ಜಯಂತ ಬಾಬು
at
Thursday, May 07, 2009
|
1 ಟೀಕೆ ಟಿಪ್ಪಣಿಗಳೇನಾದ್ರು ..?
ಏಕಾಂತವು
ಒಂಟಿತನವಲ್ಲ.
ಕಾಂತೆಯೊಡನಿದ್ದು
ಏಕಾಂತವುಂಟು.
ದಂತ ಗೋಪುರವೋ
ಸಂತನಂತಿರುವುದೋ
ಎಂದೇನೂ ಇಲ್ಲ.
ತೆರೆದುಕೊಳ್ಳದಂತ
ಹೊರಗಾಗಿ ನಿಲ್ಲುವಂತ
ಬಚ್ಚಿಟ್ಟದ್ದಲ್ಲ.
ಕಂಡದ್ದೆಲ್ಲ ಒಂದು,
ಕಾಣದ್ದೂ ಒಂದು
ಅ-
ನೇಕ
ವಿಲ್ಲದ "ಏಕಾಂತ".
Posted by
ಜಯಂತ ಬಾಬು
at
Monday, September 15, 2008
|
2
ಟೀಕೆ ಟಿಪ್ಪಣಿಗಳೇನಾದ್ರು ..?
ದಿಗಂತದತ್ತ ನೆಟ್ಟ ನೋಟವ
ಅಷ್ಟು ಸಡಿಲಿಸಿ
ಇತ್ತ ನೋಡಲು
ಮತ್ತದೇ ಆನಂದ....
ತಿಳಿ ನೀರ ಕೊಳ
ಹಾರುವ ಹಕ್ಕಿ
ಹಸಿರ ತೂಗುವ ಮರ ಗಿಡ..
ನಗುವ ಕಂದ
ನಲ್ಲೆಯ ಒಲ್ಮೆ
ಅಲ್ಲು ಇಲ್ಲು ಎಲ್ಲೆಲ್ಲೂ
ತನ್ನತನವೇ ತೋರುವ....
ಆನಂದ.
Posted by
ಜಯಂತ ಬಾಬು
at
Monday, September 15, 2008
|
1 ಟೀಕೆ ಟಿಪ್ಪಣಿಗಳೇನಾದ್ರು ..?
ಇಲ್ಲೇ.. ಹೀಗೆ.. ಇರುತ್ತಿದ್ದೆ
ನೀ ಬರುವ ಮುನ್ನ.
ನಾನು,
ನನ್ನೊಡನೆ
ಉತ್ತರವಿಲ್ಲದ ಪ್ರಶ್ನೆಗಳು.
ನೀ ಬಂದವಳೇನೂ
ಮಿಂಚ ತರಲಿಲ್ಲ,
ಮಳೆಯ ತರಲಿಲ್ಲ.
ಕನಿಷ್ಠ... ತಂಪು
ಗಾಳಿಯಾದರೂ ಬೇಡವೇ ?
ಹೋಗಲಿ ಬಿಡು,
ಜೀವ-ಜೀವನಕ್ಕೆ
ಬೇಕಲ್ಲವೇ
ಒಲವು.
ಒಲವ ಹೊನಲು
ಹರಿದರೂ..,
ಬಗೆ
-ಹರಿಯಲಿಲ್ಲ
ಕಾಡುವ ಪ್ರಶ್ನೆಗಳು. ?
ನೀನೇ ಉತ್ತರವಲ್ಲವೆನಿಸಿ
ಮತ್ತೆ ಹುಡುಕುತಿರಲು..
ಗೋಡೆಗೊರಗಿ ಕೂತ
ನನ್ನ.. ಮುಂದೆ
ನಗುತ ನೀ ನಿಂತೆ.
Posted by
ಜಯಂತ ಬಾಬು
at
Saturday, April 26, 2008
|
11
ಟೀಕೆ ಟಿಪ್ಪಣಿಗಳೇನಾದ್ರು ..?
ಹಾದು, ಹೋದ ದಿನಗಳ
ನೆನೆಯುತ ಕುಳಿತವಗೆ
ಗಕ್ಕನೆ ಹೊಳೆದದ್ದು !
ನಡೆದನಲ್ಲ... ಬಹು ದೂರ .
ಬದಲಾದ ಕಾಲ, ದೇಶ
ವೇಷ - ಭಾಷೆ.
ಬದಲಾಗದ ಬಯಕೆ.
ಎಷ್ಟಿದ್ದರೇನು ?
ಬೇಕೆಂಬ ಹವಣಿಕೆ.
ಪಣ ತೊಟ್ಟು ನಿಂತೆ.
ಮೆಟ್ಟಿ ನಿಲ್ಲುವೆ..
ಇದರ ಸೊಲ್ಲಡಗಿಸುವೆ!
ನನ್ನ ಅಡಿಯಾಳಾಲ್ಲವೇ ?
ನನ್ನನಾಡಿಸುವುದುಂಟೇ ?
"ನನ್ನ" .......?
ಮರೆತಿದ್ದೆ..ನನ್ನ ಮನೆ,
ನನ್ನ ಕೆಲಸ, ನನ್ನ ಸಂಸಾರ
ನಾನು.., ನನ್ನ ಬಯಕೆ ,
ಮೆಟ್ಟಿದರಾದೀತು..ಮತ್ತೊಮ್ಮೆ !
Posted by
ಜಯಂತ ಬಾಬು
at
Wednesday, March 05, 2008
|
2
ಟೀಕೆ ಟಿಪ್ಪಣಿಗಳೇನಾದ್ರು ..?
ಅಗೊಮ್ಮೆ ಈಗೊಮ್ಮೆ ಬಂದು
ಬಿತ್ತಿ ಹೋಗುತ್ತಿದ್ದ ಭಾವಗಳೇಕೋ
ಮುನಿಸಿಕೊಂಡಂತಿವೆ.
ಇಲ್ಲವೆಂತಿಲ್ಲ, ಬರದೇ ಇರದಂತಿಲ್ಲ !
ಹೇಳಿಯೇ.... ಬರುತ್ತವೆ.
ಬಂದು ಕೂರುವ ಮುನ್ನವೇ
ತಮ್ಮೊಳಗೆ ನಾಲ್ಕು ಮಾತನಾಡಿ
ನನಗೊಂದು ಮಾತ ಹೇಳದೆ
ನಿರ್ಗಮಿಸುತ್ತವೆ.
ಬಿತ್ತುವ ಮುನ್ನ ಉಳುವ ನೆಲವ
ನೋಡುವಂತೆ..
ನನ್ನೆದೆ ಹೊಲವನ್ನೊಮ್ಮೆ ಹೊಕ್ಕು
ಬರಡೆಂದೋ ?,ಫಸಲು ಕಾಣದೆಂದೋ ?
ಹಸನಾದ ನೆಲವನರಸಿ ಹೊರಟಂತಿವೆ.
ಪ್ರೇರಣೆ : "ಬನ್ನಿ ಭಾವಗಳೇ, ಬನ್ನಿ ನನ್ನೆದೆಗೆ .."
Posted by
ಜಯಂತ ಬಾಬು
at
Tuesday, February 12, 2008
|
7
ಟೀಕೆ ಟಿಪ್ಪಣಿಗಳೇನಾದ್ರು ..?
ನಿನ್ನ ನೆನಪೇ ..
ಉಸಿರೆಂದು,
ಹಸಿರೆಂದು,
ಹಸಿ,ಹುಸಿಯೇ!
ಗುನು-ಗುನಿಸಿ..
ಜಾರಿದೆ ನಿದಿರೆಯ
ಮಡಿಲಿಗೆ.
ಕನಸಿನಲ್ಲೊಂದು
ರೂಪ..,
ನಿನ್ನದೇ
ಪ್ರತಿ-ರೂಪ.
ಕದ್ದು ಕುಳಿತಿಹುದೋ
ಎಲ್ಲ ಚೆಲುವು..?
ನನ್ನಾಕೆ ಮೊಗವ
ಹೊದ್ದು ತೋರುವುದೋ?
ಸೊಬಗು.
ಕನ-
ವರಿಸಿ..,
ಹಿತದೇ ಕಂಪಿಸಿದೆ.
Posted by
ಜಯಂತ ಬಾಬು
at
Friday, December 28, 2007
|
1 ಟೀಕೆ ಟಿಪ್ಪಣಿಗಳೇನಾದ್ರು ..?
ತಂಪು ಗಾಳಿ,ಮಬ್ಬುಗತ್ತಲು,
ಮೌನ ನನ್ನ ಅಪ್ಪಿರಲು
ಪಿಸುಗುಟ್ಟಿತು...
ನೀ ಯಾರು? ಏನಿಲ್ಲಿ ?
ಹುಡುಕಿದೆವು ಜೊತೆಯಾಗಿ
ಬರೆದ ಕತೆ, ಕವನಗಳಲಿ
ಅಳಿದುಳಿದ ಹಸಿರು ನೋಟುಗಳಲಿ
ಹುಟ್ಟಿ ಬೆಳೆದ ಊರುಗಳಲಿ.
ಬಂಧು-ಬಳಗ, ಹಿರಿಕಿರಿಯರೆಲ್ಲರದೂ
ಅದೇ ಉತ್ತರ..ನನ್ನ ನಾಮ.
ನಾಮ ಮತ್ತೊಂದಿರೆ
ಇನ್ನೊಬ್ಬನೇ..?
ಈ ಓದು, ಕೆಲಸವಿರದೆ
ಮತ್ತೊಂದು ವೇಷ.
ಗುಣ-ಅವಗುಣ, ರೂಪ
ಈ ಕ್ಷಣದ ಸತ್ಯ.
ಇರದು, ಇರಲಾರದು.
ಇದು ನಾನಾಗಿರಲಾರೆ..!!
Posted by
ಜಯಂತ ಬಾಬು
at
Friday, December 28, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ದಾರಿ ಅರಸಿ
ನಿಂತೆ.
ನೋಡುತ.....,
ನಾಲ್ಕು ದಿಕ್ಕಿಗೊಂದು
ಹೆಸರ ದಿಕ್-ಸೂಚಿ.
ಅರಿಯದಾದೆ??
ಬಂದದ್ದು ..
ಹೋಗಬೇಕಾದದ್ದು.
ನಿಮಿಷಗಳು ಉರುಳೆ,
(ಹಿಂದಿನಿಂದ ಸದ್ದು)
"ಪೀಂ..ಪೀಂ,ಪೀಂ... "
ಕೈಯ ಎತ್ತಿ, ತಲೆಯ ತೂರಿ
ಕೂಗಿತೊಂದು ದನಿ
"ರೀ..!!?, ಹೊರಡ್ರೀ"...
ಬೆಚ್ಚುತ ಹೊರಟೆ.
ದಿಕ್ಕೊಂದು ಲೆಕ್ಕವೇ ?
ದಾರಿ ಇರದೆ.
Posted by
ಜಯಂತ ಬಾಬು
at
Friday, December 28, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ನಕ್ಕುಬಿಡು ಸುಮ್ಮನೆ
ಕೂರದೆ ಗುಮ್ಮನೆ.
ನಿಜವಂತೆ... !
ಸ್ನೇಹ, ಪ್ರೀತಿ, ಸಂಬಂಧ
ಇದ್ದ ದಿನಗಳಷ್ಟೇ
ನೋವು, ನಲಿವು.
ಇಲ್ಲದಿರುವುದಕ್ಕೆ
ಇನ್ನಾವ ವ್ಯಥೆಯು ?
ಕಂಡುದುಂಟು
ಮತ್ತೊಂದು ಕಾರಣ,
ಅಶ್ರುಬಿಂದು
ನೆಲವನಪ್ಪುವ ಮುನ್ನ.
ನಿನ್ನದೆಂಬುದಾದರು
ಇದ್ದದ್ದೇನು ?
ಕಳೆದುಕೊಂಡೆನೆನಲು
ಪಡೆದದ್ದಾದರೇನು ?
ಮರುಗದಿರು..
ಮರುಳಾಗುವೆ !
ಮರುಳನಂತೆ ನಕ್ಕುಬಿಡು...
ಹಗುರಾಗುವೆ.
Posted by
ಜಯಂತ ಬಾಬು
at
Friday, December 28, 2007
|
1 ಟೀಕೆ ಟಿಪ್ಪಣಿಗಳೇನಾದ್ರು ..?
ಬೀಸಿ ಬಂದ ತಂಗಾಳಿ
ಮುಂಗುರುಳ ನೂಕಿ
ಆ ಬೆರಗುಗಣ್ಣ ನೋಟಕೆ
ತಿಳಿಯ ಹೇಳಿತು
"ನಾನೂ ಇದ್ದೇನೆ..!"
ತಂಪು ಗಾಳಿಯ ನೆವದಿ
ನಿನ್ನ ಕೆಂಪು ಕೆನ್ನೆ ಸವರಿದ
ನಯವಂಚಕನ ನೆನೆಯೆ
ನಾ ಉರಿದು..!!
ನಿನ್ನ ಮುಗುಳುನಗೆಗೆ ಒಲಿದು,
ಮಾತು ಬರುವ ಮೂಕರಾಗಿ
ಕೇಳಿಯೂ ಕೇಳದ ಕಿವುಡರಾಗಿ
ಕಣ್ಣಿನಲ್ಲೇ ಕಂಡು ,ಕೇಳಿ..!
ನಿನ್ನಾಲಿಗಳಲಿ ನಾನು
ನನ್ನಾಲಿಗಳಲಿ ನೀನು..
ಗುರುತು ಹತ್ತದಂತೆ
ಕಣ್ಮರೆಯಾಗಿ..
ಮೌನದಲಿ ಮರೆತ
ಮಾತು....,
ನೋಟದ ಸೆಳೆತ
ತುಟಿಯ ಬಿಗಿತ
ಎದೆಯ ಬಡಿತ
ತೀರದ ತುಡಿತ.....,
ಮೊದಲ ಮುತ್ತಾಗಿ...,
ಮತ್ತಿನಲೇ ಮೈ ಮರೆತ
ವೇಳೆ..
ತಂಗಾಳಿ ಬಿಸಿಯಾದಂತಿತ್ತು.
-ಜಯಂತಬಾಬು
Posted by
ಜಯಂತ ಬಾಬು
at
Thursday, September 20, 2007
|
3
ಟೀಕೆ ಟಿಪ್ಪಣಿಗಳೇನಾದ್ರು ..?
ಮತ್ತೊಮ್ಮೆ ಕೂಗು..
ಕೇಳಿದರೂ.....
ಕೇಳಬೇಕೆನಿಸುವುದು
ಮತ್ತೆ..ಮತ್ತೆ.!
ನನ್ನ ಪ್ರೀತಿಸುವೆನೆಂದೆ...
(ಆಹಾ..!ಸೊಗಸಾಗಿದೆ.)
ಅಪ್ಪ,ಅಮ್ಮ,ಒಡಹುಟ್ಟಿದವರು
ಪ್ರೀತಿಸಿದ್ದುಂಟು
ಉದ್ದಕ್ಕೂ......!
ನಿನ್ನೊಡನೆ ನಕ್ಕಿ ನಲಿದಷ್ಟು
ಇನ್ನು ಹೆಚ್ಚೇ ಎನ್ನು....
ಗೆಳೆಯರ ಬಳಗದಿ.., ಉಂಟು.
ನೀ ಬೇರೆಯಾದ ಬಗೆ?
ಮಾಯಾವಿಯೋ..?
ಇರುವುದೆಲ್ಲಕ್ಕೆ
ಚಿತ್ತಾರವನಿತ್ತವಳೋ?
ನಾನರಿಯೆ...!
Posted by
ಜಯಂತ ಬಾಬು
at
Wednesday, September 19, 2007
|
1 ಟೀಕೆ ಟಿಪ್ಪಣಿಗಳೇನಾದ್ರು ..?
ಹನಿಯಾಗಿ,ತೆರೆಯಾಗಿ
ನೆರೆಯಾಗಿ..
ಅಪ್ಪಳಿಸಿ,
ಸದ್ದೂ
ಅಡಗಿಸಿ,
ನೀ
ರವ ಮೌನ.
ಕದಡಿದ
ಕಡಲೂ
ಶಾಂತ.
ಮನವೂ.. ?
Posted by
ಜಯಂತ ಬಾಬು
at
Wednesday, July 04, 2007
|
8
ಟೀಕೆ ಟಿಪ್ಪಣಿಗಳೇನಾದ್ರು ..?
ಸುಮ್ಮನೆ ಸುಮ್ಮನೆ
ಏತಕೀ ಹೋರಾಟ
ಮಾಡೊಂದು ಕೆಲಸ
ಇಗೋ..ಹಿಡಿದಿಕೋ
ಇರಿ..
ಇರಿ..,
ಅಂದೆಯಾ..?
ಇನ್ನೇತಕೆ?
ನಂಬೆನೆಂದು
ನಿನ್ನ ಮನ
ನಂಬಿಸಲೆಂದೆ
ನನ್ನ ಪಣ
ಇರಿ..ಇರಿ..
ಬೇಡವೀ ಬದುಕು
ಇರಿ..ಇರಿ..
ಕೊರಗದಿರಿ,
ನಾನಂದದ್ದು
ಅಲ್ಲ,ಆ ಪರಿ
ನೀವಿರದೆ
ನಾ ಕೆರೆ ದಾರಿ.
-ಜಯಂತ್
Posted by
ಜಯಂತ ಬಾಬು
at
Wednesday, July 04, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ಅರಿಯಲು ಹೊರಟಾಗ
ನಿನ್ನ..,
ನಾ ಅರಿತೆ..
ಅರಗಿಸಿಕೊಂಡೆ,
ಹೊಸದೊಂದು
ಭಾಷೆ,
ಶಬ್ದಕೋಶ.
ಬೇಡ ಅಂದದ್ದೆಲ್ಲ
"ಹೌದು"
ಹೌದು ಎಂದದ್ದು
"ಹೌದೂ "
ನಿನ್ನಿಷ್ಟವೆಂದದ್ದು
"ಅಲ್ಲವೇ ಅಲ್ಲ" !!.
ಕಣ್ಣು,ಬಾಯಿ,ಕೈ ಸನ್ನೆ..
ಸನ್ನೆಗಳೋ,
ಗರವ ಹಿಡಿಸಿ
ಬಿಡಿಸುವ..
ಬೂದಿ,ಬೇವುಗಳೋ..?
ಹೊಸದು ಲೋಕವು
ಮರಳುವುದು ಎನಿತು..??
ಜಯಂತ್
Posted by
ಜಯಂತ ಬಾಬು
at
Thursday, June 21, 2007
|
7
ಟೀಕೆ ಟಿಪ್ಪಣಿಗಳೇನಾದ್ರು ..?
ಆಳದ ಕೂಪದ ಅಂಧಕಾರದ ಅಂದದಿ
ಆವರಿಸಿರುವ ಈ ಕತ್ತಲೆ ರಾತ್ರಿಯಲೂ
ಮಣಿಸಲಾಗದ ನನ್ನ ಆತ್ಮವನ ಹರಸಿದ
ದೇವನೆಂಬ ನಾಮಕೆ ಅನಂತ ನಮನ
ಅಳುಕಲಿಲ್ಲ,ಬಿಕ್ಕಳಿಸಲಿಲ್ಲ..!!
ಉಸಿರುಗಟ್ಟಿಸುವ ಸನ್ನಿವೇಶದ ಪಾಶದಲೂ
ನೆತ್ತರು ಹರಿದರು ಅವಕಾಶಗಳ ಕೊಡಲಿ ಪೆಟ್ಟಿಗೆ
ತಲೆಯ ತಗ್ಗಿಸದೇ ಸೋತು...
ಈ ನೋವು,ಸಂಕಟದಿಂದಾಚೆ
ಅಣಕಿಸುತಿರೆ ನೆರಳಿನ ಭೀತಿಯು
ಕಾಲನ ಅಬ್ಬರ,ಕಾಣುವುದೆ ನನ್ನ
ಅಳುಕಿಲ್ಲದೆ...ಎಂದಿಗೂ,ಎಂದೆಂದಿಗೂ..
ನನ್ನ ವಿಧಿಯ ಸರದಾರ ನಾನೆ
ನನ್ನ ಆತ್ಮದ ಒಡೆಯ ನಾನೆ
ಇರಲೇಳು ಹೆಜ್ಜೆ ಹೆಜ್ಜೆಗೂ ಮುಳ್ಳು
ಬರಲೇಳು ಕಷ್ಟಗಳ ಮಹಾಪೂರ
ಅನುವಾದ :
ಈ ಕವನದ ಮೂಲ ಕರ್ತೃ ಯಾರು ತಿಳಿದಿಲ್ಲ .. ಇದನ್ನ ಗರುಡಭೇರುಂಡ ಅವರೇ ಹೇಳಬೇಕು..ಸಿರಿಗನ್ನಡ ಕವಿ ಸಂಕುಲದಲ್ಲಿ ಇದ್ದ ಒಂದು ಕವನದ ಭಾವಾನುವಾದ
Posted by
ಜಯಂತ ಬಾಬು
at
Friday, June 15, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ಅಲ್ಲ ನಾ ಬರೆಯ
ಹೊರಟದ್ದು...
ಕವನವಲ್ಲ..!!
ಮುರಿದ ಮನೆಗೆ
ಹರಿದ ಛಾವಣಿ..
ತೂತ ಮುಚ್ಚಲು
ತೇಪೆ ಬಟ್ಟೆ.
ಕೆಂಪು,ಹಸಿರು,ಕೇಸರಿ,ನೀಲಿ,ಬಿಳಿ
ಹೀಗೆ ಹಲವಾರು..
ತೇಪೆ ಬಟ್ಟೆ..
ಯಾರು ಯಾರು
ಯಾವ ಕಾಲಕ್ಕೋ
ಹಾಕಿದ ತೇಪೆ..
ಒಮ್ಮೆ ಮಳೆಗೆ
ಒಮ್ಮೆ ಬಿಸಿಲಿಗೆ
ಮತ್ತೊಮ್ಮೆ ಚಳಿಗೆ.
ಬೆಳಕ ತಡೆಯಬಹುದೇ ??
ಗಾಳಿಯು ಬರಕೂಡದೇ..?
ಸೊಗಸೆನಿಸಿತು ನಾಲ್ವರಿಗೆ,
ಕುರಿಗಳ ಕಾಯ್ವರಿಗೆ.
ಹುರಿದುಂಬಿಸಿದರು
ಹುರಿದು ತಿಂದರೂ!!
ಕುರಿ ಮಂದೆಯ.
ತೇಪೆಯ ಮೇಲೆ ಮತ್ತೆ ಅದೇ
ಬಣ್ಣದ ತೇಪೆಗಳು
ಗಾಳಿ,ಬೆಳಕಿಲ್ಲ
ಬೆಳಕ ಕಾಣದವರಿಗೆ
ಕತ್ತಲು ಕಪ್ಪಲ್ಲ..!
ತೇಪೆಯ ಮೇಲೊಂದು
ತೇಪೆ ಬೀಳುತಲೇ ಇರೆ
ತಿರುಗಿತು ತಲೆ,
ತೇಪೆಗಲ್ಲ..
ತೇಪೆ ಹಾಕಿಸಿ,
ಹಾಕಿದವರಿಗೆ.
ನಮ್ಮ ತೇಪೆಯಲ್ಲವೇ
ಮುರುಕು ಮನೆಗೆ ಸೂರು
ನಮ್ಮ ತೇಪೆಯಲ್ಲವೇ
ಹರುಕು ಛಾವಣಿಗೆ ಶೋಭೆ..!!
Posted by
ಜಯಂತ ಬಾಬು
at
Friday, June 15, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ಅವಳ ನೆನಪಾದಾಗಲೆಲ್ಲ
ಹೀಗೆ...,
ಹಾಲಿಲ್ಲದ ಟೀ,
ನೀರಸ ಕೆಲಸ,
ಅವೇ
ಉಸಿರುಗಟ್ಟಿಸುತ್ತಿದ್ದ
ಮುಖಗಳು,
ಹೀಗೆ ಎಲ್ಲವೂ
ಏನೋ...
ಹೊಸದಾಗಿ ಕಂಡು,
ಮತ್ತೊಂದು ದಿನವ
ದೂಡಲು,
ನಾಳೆಯ ಕನಸ
ಕಾಣಲು,
ಸಜ್ಜಾಗುತ್ತೇನೆ.
ಹೆಜ್ಜೆ ಹೆಜ್ಜೆ..
ಇಡುತ.
ಜಯಂತ್
Posted by
ಜಯಂತ ಬಾಬು
at
Thursday, May 31, 2007
|
6
ಟೀಕೆ ಟಿಪ್ಪಣಿಗಳೇನಾದ್ರು ..?
ಬೆಳ್ಳಿಯ ಚುಕ್ಕಿ
ಕತ್ತಲ ಹೆಕ್ಕಿ
ತಳ್ಳಿತಾಚೆ ನಭದಿ
ಕಳ್ಳ ಹೆಜ್ಜೆ ಇಡುತ
ಪರಸ್ಪರ ದೂರಾಗುತ
ಹೊನ್ನ ಕಿರಣಗಳ ಅವರೋಹಣ
ಕಣ್ಣಮರೆಸಿ,ಬೆಳಕ ಹರಿಸುವಾ
ಇಂದಾದರು ನಮ್ಮದೇ ಜಯವು
ಮನದಿ ನೆನೆವವು
ಯಾವ ಶಾಪವೋ,
ಇನ್ನಾವ ಪುರುಷಾರ್ಥವೋ?
ಕತ್ತ ಮೀಟಿ,ತಲೆಯ ಕುಣಿಸಿ
ಕ್ಕೊಕ್ಕೊಕ್ಕೊ.....ಕ್ಕೋ!!!!
ಈ ಕವನದ ಮೂಲ ಕರ್ತೃ - ಕುಕ್ಕುಟೇಶ.
ಹಕ್ಕುಗಳನ್ನು ಹೆಕ್ಕಲಾಗಿದೆ.
Posted by
ಜಯಂತ ಬಾಬು
at
Sunday, May 13, 2007
|
3
ಟೀಕೆ ಟಿಪ್ಪಣಿಗಳೇನಾದ್ರು ..?
ನೀವು ಬೆಂಗಳೂರಿನವರೇ..?
ಬೆಂಗಳೂರಿಗೆ ಹೋಗಿ ಬಂದಿರೇ?
ಹೊಸೂರು ರೋಡ್ ಗೊತ್ತಲ್ಲವೇ.?
ಐ.ಟಿ,ಬಿ.ಟಿ ಯವರಾದರಂತೂ
ಗೊತ್ತೆ ಇರಬೇಕಲ್ಲವೇ..?
ಇದು ಹೊಸೂರು ರೋಡು.
ಎಲ್ಲಿಂದ ಎಲ್ಲಿ ನೋಡಿದರೂ
ನಿಂತ ಕಾರು,ಬಸ್ಸು,ಲಾರಿ ಲೋಡು.
ಹೀಗಿರಲಿಲ್ಲವಂತೆ...!
ವರುಷಗಳ ಹಿಂದೆ,
ಇಲ್ಲಿ..
ಈ ದಟ್ಟಣೆ,ಸಂಘರ್ಷಣೆ.
ವೇಗವಾಗಿ ಓಡುತ್ತಿದ್ದವಂತೆ
ಹಲ-ಕೆಲ
ಬಸ್ಸು ಲಾರಿಗಳು.
ಹೌದೌದು,,,ಎಲ್ಲ ಹೇಳುವುದದೇ
ಐಟಿ.ಬಿಟಿ ಯ ಬೆಳವಣಿಗೆ,
ಅಪಾರವಂತೆ..!!
ಇಲ್ಲಿ ಹೀಗೆ ಒಮ್ಮೆ
ಕಾರಿನಲ್ಲಿ ಕುಳಿತಾಗ
ಓಹ್..ಮರೆತೆನೇ..?
ಇಲ್ಲಿಯ ಡ್ರೈವಿಂಗ್ ಹೆಸರು
"ಬಂಪರ್ ಟು ಬಂಪರ್".
ಭಾಗ್ಯಲಕ್ಷ್ಮಿಯಲ್ಲ !!
ಇರಕೂಡದು..
ನನ್ನ,ಹಿಂದಿನ ಮುಂದಿನ
ಅಕ್ಕ,ಪಕ್ಕದ ಗಾಡಿಗೂ
ಸೆಂಟಿಮೀಟರ್ ಜಾಗ.
"ಸಮಯಸಾಧಕರಿದ್ದಾರೆ"
ಎಚ್ಚರ.
ಒಂದು ಸಂಜೆ,
ಮುಚ್ಚಿದ ಕಿಟಕಿ,
ಅರಚುವ ಬಾನುಲಿ,
ಬೊಮ್ಮನಹಳ್ಳಿ ಜಂಕ್ಶನ್.
ಐದು,ಹತ್ತು..ಇಪ್ಪತ್ತು
ನಿಮಿಷಗಳೋ?
ಬೋಡುತಲೆಗೆ ತೊಟ್ಟಿಕ್ಕುವ
ತಣ್ಣನೆ ನೀರ ಹನಿಗಳು.
ಐದೈದು ನಿಮಿಷಕ್ಕೊಮ್ಮೆ
ಒಂದು.
ಒಂದೇ~ ಹೆಜ್ಜೆ ಇಡುತ....
ನಡೆದಿತ್ತು.
ಎಂಜಿನ್ ನಿಲ್ಲಿಸುವಂತಿಲ್ಲ,
ಮುಖದ ಗಂಟೂ ಬಿಡಿಸುವಂತಿಲ್ಲ.
ಪಕ್ಕದಲ್ಲಿ ನಮ್ಮದೋ,ನೆರೆಯವರದ್ದೋ
ಆಫ಼ೀಸೂ - ಬಸ್ಸು.
ಬ..ಳ..ಲಿ...ಬೆಂದು,ನಿದ್ರಿಸುವ,
ಎಫ಼್.ಎಮ್ ಗಳ ಅಬ್ಬರದಿ ವಿಹರಿಸುವ,
ಸಾಫ಼್ಟ್-ವೇರ್ ಎಂಜಿನಿಯರ್ ಗಳು.
ನನ್ನ ಕಾರಿಗೂ,
ರಸ್ತೆ ವಿ-ಭಜಕಕ್ಕೂ..
ಇದ್ದೂದೊಂದೇ ಅಡಿ.
ಯಾವುದೋ....
ಹಾಡ ಕೇಳುತ
ಮೈಯ್ಯ ಮರೆತವನ
ಎಚ್ಚರಿಸಿದ್ದು,
ಸುಂಯ್ಯನೆ ಬಂದು,
ಗಕ್ಕನೆ ನಿಂತ
ಸ್ಚೂಟರು..
ಮೇಲೊಬ್ಬ ಜೋಕರು.
ನಕ್ಕನೊಮ್ಮೆ ನನ್ನ ನೋಡಿ
ನಾನು ನಕ್ಕೆ,
ದೇಶಾವರಿ.
ಏನು ಟ್ರಾಫ಼ಿಕ್ಕು ಸಾರ್..!
ಸರ್ಕಾರ ಅದೇನು ಮಾಡತೈತೋ..?
ಅಲ್ಲವೇ..?
ಯೋಜನಾ ಆಯೋಗದಲ್ಲಿ
ನಾನಿಲ್ಲವೇ..?
ಮತ್ತೊಮ್ಮೆ ನಕ್ಕೆ.
ನೀವೂ ಸಾಫ಼್ಟ್ ವೇರಾ..? ಸಾರ್
ಹೌದೆಂದೆ.
ಬರಿದಾಗದ ಬತ್ತಳಿಕೆ,
"ಇನ್ನ ಎಷ್ಟು ವರುಶ ಸಾರ್
ಹಿಂಗೆ..???"
ಜಯಂತಬಾಬು
Posted by
ಜಯಂತ ಬಾಬು
at
Saturday, May 05, 2007
|
8
ಟೀಕೆ ಟಿಪ್ಪಣಿಗಳೇನಾದ್ರು ..?
ಅಯ್ಯೋ..!! ಗೊಡ್ಡು ಕತ್ತೆ..!
ಅಂದಿನಿಂದ ಇಂದಿನವರೆಗೆ
ಅದೇ ಗತಿ,ಅದೇ ಬಟ್ಟೆ.
ಆಹಾ! ಏನಿದು ಸೊಬಗು,
ಇದೆಲ್ಲಿಯ ಸುಂದರ ಅಶ್ವ..?
ಅದರ ಹೊಳಪೇನು,
ವೈಯಾರದ ನಡೆಯೇನು.
ಏರಲೇ..?ಕಟ್ಟಿಹಾಕಲೇ..?
ಸನಿಹದಿಂದ ಮನದುಂಬಿ ನೋಡಲೇ..?
ಇದೇನಿದು ಹಣೆಪಟ್ಟಿ..!
ಯಾವುದೋ...
ಸಾಮ್ರಾಜ್ಯದ್ದಂತೆ.
ಕಟ್ಟಿದರೆ ಕದನವು,
ಸೋತವರ ಅಡಿಯಾಳು.
ಈ ಕತ್ತೆಯೊಡನೆ ಏಗುವುದೇ..?
ಬಾಳೆಲ್ಲ ಗೋಳಿಡುವುದೇ..?
ಅಡಿಯಾಳದರೇನು..?
ಅಶ್ವವದುವೇ ಸೊಬಗು..,
ಸಾಮ್ರಾಜ್ಯದಿ ಇನ್ನೆಷ್ಟು ನಲಿವೋ..!
ಕಟ್ಟುವೆ...
ಕಾದಾಡುವೆ...
ಅಡಿಯಾಳಾಗುವೆ.
ಅಶ್ವವೆಲ್ಲಿ...??!! ಕಾಣದೇ.
ಜಯಂತಬಾಬು
** ಬಟ್ಟೆ = ವಸ್ತ್ರ, ದಾರಿ **
Posted by
ಜಯಂತ ಬಾಬು
at
Thursday, May 03, 2007
|
3
ಟೀಕೆ ಟಿಪ್ಪಣಿಗಳೇನಾದ್ರು ..?
ಹೀಗೆ ಒಂದು ಕಥೆ
ಕಥೆಯೆಂದೆನೆ?ಕಥನ
ಕಾವ್ಯ ಕಥನ.
ಒಂದಾನೊಂದು ಕಾಲದಲ್ಲಿ
ಒಂದು ರಾಜ್ಯ,ಒಬ್ಬ ರಾಜ.
ರಾಜ ಆಳಿದ,
ಆಳು,ಕಾಳು,ಮಡದಿಯರೊಂದಿಗೆ.
ಕೈ-ಕಾಲು ಆಡದಂತಾಗೆ
"ಅನ್ಯಥಾ ಶರಣಂ ನಾಸ್ತಿ"
ಕಾಡಿಗೆ ಹೊರಟ.
ರಾಜ,ರಾಜ್ಯಕ್ಕೊಂದ ದಿಕ್ಕ
ತೋರಬೇಕಲ್ಲವೇ?
ದಿಕ್ಕು - ಮೊದಲ ಮಡದಿಯ
ಮೊದಲ ಮಗ ,ರಾಜಕುಮಾರ.
ಪಟ್ಟ-ಅಭಿಷೇಕ..
ರಾಜಕುಮಾರ,ರಾಜನಾದ.
ಆಳತೊಡಗಿದ...!!
ರಾಜ್ಯದಲಿ ದಂಗೆ,
ಬರ,ಹಾ-ಹಾ ಕಾರ!!
ಬೊಕ್ಕಸದಲ್ಲೊ ಬೊಗಸೆ ಮಣ್ಣು.
ರಾಜ ಅದುರಿದ,
ಮಂತ್ರಿಗಳ ಕರೆಸಿ
ದಾರಿಯೊಂದ ಹುಡುಕಿರೆಂದ.
ಚತುರನು, ಒಬ್ಬ ಮಂತ್ರಿಯು
ನಮ್ಮ ಸೈನ್ಯ ಬಲವು,
ನಿಮ್ಮ ಪರಾ-ಕ್ರಮವು!
ನೆರೆ ರಾಜ್ಯವ ಗೆಲ್ವುದು,
ಬೊಕ್ಕಸವ ತುಂಬುವುದು,
ಎನೆ..,
ರಾಜ ಹರುಷ-ರೋಷದಿ
"ಯಾರಲ್ಲಿ ಸೇನಾಧಿಪತಿಯ
ಕರೆಸಿರಿಲ್ಲಿ" ಚಪ್ಪಾಳೆ ತಟ್ಟಿದ.
ಸೇನಾ-ಅಧಿಪತಿ ತರಗುಟ್ಟಿದ
"ಕೂಡದು ಮಹಾಪ್ರಭು,
ಸೇನೆಯಲ್ಲಿ ಹುರುಪಿಲ್ಲ,
ಅಶ್ವ,ಕರಿಗಳಿಗೆ ಮೇವಿಲ್ಲ,
ಈ ಸಮಯದಿ ಯುದ್ಧವು ತರವಲ್ಲ".
ರಾಜ್ಯವನಾಳ್ವುದು,ಜನಹಿತವು
ನಮ್ಮದಲ್ಲವೇ ಹೆಗಲ ಹೊರೆ
ಹೇಳುವುದು ಅನುಸರಿಸುವುದಲ್ಲವೇ
ನಿಮ್ಮ ಹೊಣೆ
ಸಜ್ಜಾಗಲಿ...
ಮುಂದಿನ ಹುಣ್ಣಿಮೆಗೆ,
ಆಕ್ರಮಣವಾಗಲಿ!!
ರಾಜನಾಜ್ನೆ..ಶಿರಸಾ-ವಹಿಸಿ
ಸೇನೆ ಸಜ್ಜುಗೊಳಿಸಿ
ಮನದೆ ದುಖಃ ಉಮ್ಮಳಿಸಿ,
ಮಡದಿಯೊಡನೆ ನುಡಿದ
"ಕೇಡುಗಾಲವಿದು..
ನಮಗಿನ್ನು ಉಳಿವಿಲ್ಲ..!!,
ರಾಜನಿಗೆನೋ ಮಂಕು,
ತಿರುಗಿ ಬಾರೆನೆಂಬ ಶಂಕೆ!!
ಅಳುಕದಿರು,ಮಕ್ಕಳ ಬಾಳ್ವೆಗೆ
ದಾರಿ ತೋರುವಂತಾಗು"
ಬಿಕ್ಕಳಿಸಿದ...ಸೇನಾ-ಅಧಿಪತಿ.
ಪರಾಕ್ರಮಿ,ಎಂಟೆದೆ ಭಂಟನು
ನನ್ನ ಪ್ರಾಣೇಶ್ವರನು..
ಬಿಕ್ಕಳಿಸಿ ಅಳುವುದೇ..?
"ಹೆದರದಿರಿ,ದೇವನಿರುವುನು,
ಎಂದಿನಂತೆ ಪೊರೆವನು.."
ಮರುಗಿದಳು....
ತುಪ್ಪ ದೀಪವ ಹಚ್ಚಿ ಮಲಗಿದಳು.
ಬಂದಿತು ಹುಣ್ಣಿಮೆ ಎಂದಿನಂತೆ
ನೂರು,ಸಾವಿರ ಆನೆ ಕುದುರೆ
ಮುಂದೆ,ಮುಂದೆ...
ನಡೆದರ್ ಹಿಂದೆ ಕಾಲಾಳು.
ಡೇರೆ ಹಾಕಿದ್ದ,ರಾಜ..
ಹತ್ತು ಮೈಲಿ ದೂರಕ್ಕೆ.
ಸೇನೆಯ ಹುರಿದುಂಬುತ..
ವೀರಾವೇಶದಿ ಕೂಗಿದ..
ಎಂಟೆದೆಯ ಭಂಟ..
"ಸಹೋದರರೇ...
ನಲುಗುತಿರುವಳು ತಾಯಿ,
ಮಾತೄಭೂಮಿಯ ಋಣವಿದು,
ಗೆಲುವು,ಇಲ್ಲ ಸಾವು
ಜೀವ ತೇಯುತಿರುವ ದೊರೆಯು
ನಮಗಾಗಿ,ನಮ್ಮವರಿಗಾಗಿ
ಇದುವೇ ಸದವಕಾಶವು..
ನುಗ್ಗಿರಿ..ಮುನ್ನುಗ್ಗಿರಿ...!!
ಉಸಿರ ಕೊನೆಯವರೆಗೆ ಹೋರಾಡಿರಿ"
ಉಗುಳ ನುಂಗಿದ.
ಘಂಟೆಗೊಮ್ಮೆ ಸುದ್ದಿ ಕೇಳುತ
ರಾಜ ಕುಳಿತ ಮಂತ್ರಿಯೊಡನೆ,
ಸಮ-ಅಲೋಚಿಸುತ..!!
ಉರುಳಿದವು ತಲೆ
ಹರಿಯಿತು ರಕ್ತ ನಾಲೆ,
ಸೂರ್ಯ ಮುಳುಗುವಲ್ಲಿ
ಮುಳುಗಿತು ಸೇನೆ.
ಅಳಿದು-ಉಳಿದವು
ತಪ್ಪಿಸಿಕೊಳ್ಳುತ್ತಿದ್ದವು
ಹದ್ದು,ನಾಯಿ,ಮೃಗಗಳ.
ಹೊತ್ತು ಮುಳುಗಿದಂತೆ
ಸುದ್ದಿ ಬಂತು..
ಸೇನಾಧಿಪತಿ ಇನ್ನಿಲ್ಲ,
ಸೈನ್ಯದಲಿ ಇನ್ನೇನೂ ಉಳಿದಿಲ್ಲ.
ವಿಷಮ ಪರಿಸ್ಥಿತಿ..
ತೀವ್ರ ಸಮಾಲೋಚಿಸಿ,
ರಾಜ ಸಂಧಿಗೊಪ್ಪಿದ.
ನೆರೆರಾಜ್ಯದೊಂದಿಗೆ
ಸಂಧಾನವ ಮಾಡಿದ.
ಯುದ್ಧದ ಹಾನಿಯಿಂದ ಕುಪಿತನು,
ಬರದ ದಾಳಿಯಿಂದ ಪೀಡಿತನೂ,
ನೆರೆರಾಜ್ಯದ ರಾಜ..
ಅಪಾರ ಹೊನ್ನು,ವರಹ
ಕಪ್ಪವಾಗಿ ಸಲ್ಲಿಸೆಂದ.
ರಾಜ ಆಜ್ನೆ ಹೊರಡಿಸಿದ
"ರಾಜ್ಯದ ಹಿತಕೆ,
ಮಾತೃಭೂಮಿಯ ಸೇವೆಗೆ
ಇರುವುದೆಲ್ಲವ ನೀಡಿರೆಂದು...."!!
ಜಯಂತಬಾಬು.
Posted by
ಜಯಂತ ಬಾಬು
at
Thursday, May 03, 2007
|
2
ಟೀಕೆ ಟಿಪ್ಪಣಿಗಳೇನಾದ್ರು ..?
ದೂರ ಹೋಗುವೆ.
ಮತ್ತೆಂದು ಬರುವೆ..?
ನಿನಗಾಗಿ ನಾ ಕಾದಿರುವೆ.
ಯಾರೊಡನೆ ಹೇಳಲಿ?
ಏನೆಂದು ತಿಳಿಸಲಿ?
ನೀನಿರದ ದಿನಗಳ
ಹೇಗೆ ದೂಡಲಿ..?
ಏಕಳುವೆ ಪ್ರಿಯೆ..,
ನಿನ್ನನಗಲಿ ನಾನೆಲ್ಲಿ ಹೋಗುವೆ
ಕಣ್ಣ ಮುಚ್ಚು ಕಾಣುವೆ
ಮನದಿ ನೆನೆ,ಮಾತನಾಡುವೆ
ಎಲ್ಲಿಯ ದೂರ?
ಯಾವ ಭಯ..?
ಅಗೋ ನೋಡಲ್ಲಿ...!!
ಬರುವನಲ್ಲಿಗೂ ಇಲ್ಲಿಯ ಚಂದಿರ.
ಪಕ್ಷಪಾತಿ,ನಿನ್ನಯ ಬಳಿಗೆ
ಮೊದಲು ಬರುವನಂತೆ..!
ಹೇಳಿ ಕಳುಹಿಸು....ನಿನ್ನಂತರಂಗವ
ಆ ಶೀತಲ ಕಿರಣದಿ ಪಸರಿಸು.
ನನ್ನೊಡಲ ನೋವು
ಬತ್ತದ ಒಲವು
ದಿನವೂ ವಟಗುಟ್ಟುವೆ...!
ಇಗೋ,ಪರದೆ ಸರಿಸಿ ನೋಡುತಿರುವೆ
ನಗುತ್ತಾನೆ ತುಂಟ...!!
"ನನ್ನನೇನು ಕೊಂಡುಕೊಂಡಿರಾ...???".
ಜಯಂತಬಾಬು.
Posted by
ಜಯಂತ ಬಾಬು
at
Tuesday, May 01, 2007
|
1 ಟೀಕೆ ಟಿಪ್ಪಣಿಗಳೇನಾದ್ರು ..?
ಸದ್ದುಗದ್ದಲ
ಮುದ್ದು ಜೋಗುಳ,
ನಡೆ ನಡೆಯೆ....
ಜಗವದು ವಿಶಾಲ
ಮನವದು ಬಚ್ಚಲ.
ಹಸಿರು ತೋರಣ
ಸಿಹಿ ಹೂರ್ಅಣ,
ಬಿಸಿಯುಸಿರ ಕದನ
ಮೆಚ್ಚುವ ಆಕ್ರಂದನ.
ಸಣ್ಣ ಮುಳ್ಳು
ದೊಡ್ಡ ಮುಳ್ಳು
ಸುತ್ತುತಿರೆ
ಚುಚ್ಚುತಿದೆ.
ಜಗವನಾಳಿದ್ದಲ್ಲ,
ಅಳೆದುದು ಅಲ್ಲ..!!
ನಾಲ್ಕು ಜಾಗವ
ನೋಡಿದುದೇ..
ನಾ ಕಾಣದುದೇ..??
ಬಿಂಕ.
ಟೊಂಕ ಕಟ್ಟಿ,
ಗಾಣಕೆ ಎತ್ತನಿಟ್ಟಿ
ಸುತ್ತು.
ಸುತ್ತು..ಸುತ್ತು ..ಸುತ್ತು..
ಜೀವಸೆಲೆ
ಸೆಳೆವ ಸುತ್ತು.
ಮೂಕ,ಕಿವುಡ,ಹೆಳವ
ಧನಿಕ,ಬಡವ,ಮೂಢ
ಸಾಲುಗಟ್ಟಿ ನಿಂತರಲ್ಲಿ..
ಸರದಿಯಲ್ಲಿ.
ಜಯಂತ್.
Posted by
ಜಯಂತ ಬಾಬು
at
Monday, April 30, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?
ಬೀಳಿಸದಿರೆಲೊ ನಿನ್ನ ನೆರಳನಿತರರ ಮೇಲೆ|
ಬಾಳಿಕೊಳುಗುವರು ತಂತಮ್ಮ ಬೆಳಕಿನಲಿ||
ಮೇಲುಬೀಳುಗಳಾರ್ಗದೆಂತೊ ನೀನೆನರಿವೆ?|
ತಾಳದಿರು ಗುರುತನವ-ಮಂಕುತಿಮ್ಮ||
ಕನ್ನಡದ ಗೀತೆಯಾದ ಡಿ.ವಿ.ಜಿ ಅವರ "ಮಂಕುತಿಮ್ಮನ ಕಗ್ಗ" ದ "ಗುರುಪದವಿ ಬೇಡ" ಅಧ್ಯಾಯದ ನನ್ನ ನೆಚ್ಚಿನ ಮುತ್ತುಗಳು.ಗುರುಪದವಿ ಬೇಡ ಅನ್ನುವ ಅಧ್ಯಾಯ- ಅದರಲ್ಲಿ ಐದು ಸೊಗಸಾದ ಕವನಗಳು ...ಈ ವಿಷಯದ ಮಹತ್ವದ ಅರಿವು ಮೂಡಿಸುತ್ತವೆ.ಜಗತ್ತಿನ ದೊಡ್ಡ ಅಣ್ಣ ಎಂದು ಕರೆಸಿಕೊಳ್ಳುವವರಿಗೂ ಈ ಪದ್ಯದ ಸಾರಾಂಶ ತಿಳಿದಿದ್ದರೆ ಒಳಿತಿತ್ತೇನೊ..!!
ಆಂಗ್ಲ ಭಾಷೆಯಲ್ಲಿ ಇದನ್ನ " ಸೆಲ್ಫ಼್ ಎಕ್ಸಪ್ಲನೇಟರಿ " ಅಂತಾರೆ.
ನಿನ್ನ ನೆರಳನ್ನ ಇತರರ ಮೇಲೆ ಬೀಳಿಸಬೇಡ - ಹೇರಬೇಡಿ.... ಅಭಿಪ್ರಾಯ,ಸಂಪ್ರದಾಯ,ಆಚರಣೆ ..ಹೇರಬೇಡಿ.
ಓಹ್ ಅಂದ ಹಾಗೆ ನಾನು ಹೇರುವ ಪ್ರಯತ್ನ ಏನಾದ್ರು ಮಾಡ್ತ ಇದೀನಾ ಅಂತ ಸಂದೇಹ ಬಂತು..ನನಗನಿಸಿದ ಮಟ್ಟಿಗೆ ಈ ಪದ್ಯ ನನಗೆ ತುಂಬಾ ಇಷ್ಟ ಆಯ್ತು ..ಹಂಚಿಕೊಳ್ತ ಇದ್ದಿನಿ..ಹಂಚಿಕೊಳ್ತ ಇದೀನಿ ಸರಿ ಆದರೆ ಈ ರೀತಿ ಪದ್ಯದ ಸಾರಾಂಶ ಹೇಳ್ತ ಎಲ್ಲೋ ನಾನು ನನ್ನ ಅಭಿಪ್ರಾಯ ಹೇರೋಕೆ ಹೊರಟ್ನ ಅಂತ ಭಯ.ಬೇಡ ...ನೀವು ಓದಿಕೊಳ್ಳಿ, ಅರ್ಥೈಸಿಕೊಳ್ಳಿ....
Posted by
ಜಯಂತ ಬಾಬು
at
Sunday, April 29, 2007
|
0
ಟೀಕೆ ಟಿಪ್ಪಣಿಗಳೇನಾದ್ರು ..?